DistrictGadagHassanLatestNational

ವಾಲ್ಮೀಕಿ, ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಸಂಸತ್ ಭವನದ ಎದುರು ಬಿಜೆಪಿ ಜೆಡಿಎಸ್ ಸಂಸದರ ಪ್ರತಿಭಟನೆ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದ್ದು, ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಇಂದು ಬಿಜೆಪಿ ಹಾಗೂ ಜೆಡಿಎಸ್ ಸಂಸದರು ನವದೆಹಲಿಯಲ್ಲಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜವಾದ ಬಣ್ಣ ಬಯಲಾಗಿದೆ. ಅವರು ತಮ್ಮಷ್ಟಕ್ಕೆ ತಾವೇ ಪ್ರಾಮಾಣಿಕರು ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಾರೆ. ಇದು ಮೊದಲನೇಯದ್ದೇನಲ್ಲ ಬಿಡಿಎನಲ್ಲಿ‌ ರಿ ಡೂ ಮಾಡಿ ಸಿಲುಕಿಕೊಂಡಿದ್ದರು, ಆಗ ಆಯೋಗ ರಚನೆ ಮಾಡಿ ಪ್ರಕರಣ ಮುಚ್ಚಿ ಹಾಕಿದರು. ಈ ಮಧ್ಯೆ ಮಂಡ್ಯದಲ್ಲಿ ಮುಡಾದ ಹಗರಣ ಆಯಿತು ಆಗ ಸಿದ್ದರಾಮಯ್ಯ ಅವರು ಸಿಬಿಐಗೆ ಕೊಟ್ಟರು. ಈಗ ಮೈಸೂರಿನಲ್ಲಿ ಮುಡಾ ಹಗರಣ ಆಗಿದೆ. ಅದನ್ನು ಯಾಕೆ ಸಿಬಿಐಗೆ ಕೊಡಬಾರದು ಎಂದು ಪ್ರಶ್ನಿಸಿದರು.
ಮಂಡ್ಯ ಮುಡಾದಲ್ಲಿ ಹಗರಣ ಆದರೆ ಸಿಬಿಐಗೆ ಕೊಡುತ್ತಾರೆ. ಮೈಸೂರು ಮುಡಾ ಹಗರಣ ಆದರೆ, ನ್ಯಾಯಾಂಗ ತನಿಖೆಗೆ ಕೊಡುತ್ತಾರೆ. ಇದನ್ನೂ ಸಿಬಿಐ ತನಿಖೆಗೆ ನೀಡಿ, ತನಿಖೆ ಮುಗಿಯುವವರೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಮಂಡ್ಯದಲ್ಲಿ ನಡೆದ ಅಕ್ರಮದ ಆರೋಪ ಪ್ರತಿಪಕ್ಷದವರ ಮೇಲೆ ಇತ್ತು ಎಂದು ಅದನ್ನು ಸಿಬಿಐ ತನಿಖೆಗೆ ನೀಡಿದ್ದೀರಿ, ಮೈಸೂರಿನ ಮುಡಾದಲ್ಲಿ ನಡೆದ ಹಗರಣದಲ್ಲಿ ನಿಮ್ಮ ಹೆಸರಿದೆ ಎಂದು ತನಿಖೆಗೆ ಆಯೋಗ ರಚನೆ ಮಾಡುತ್ತೀರಾ ? ರಾಜ್ಯದಲ್ಲಿ ಯಾವ ನ್ಯಾಯಾಂಗ‌ ಆಯೋಗ ಯಾವ ಹಗರಣವನ್ನು ಬಯಲಿಗೆಳೆದಿದೆ, ಮುಡಾ ಹಗರಣ ಮುಚ್ಚಿ ಹಾಕುವ ಸಲುವಾಗಿ ನ್ಯಾಯಾಂಗ ಆಯೋಗ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.


ರಾಜ್ಯ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಅಷ್ಟೇ ಅಲ್ಲ ಎಸ್ಸಿಪಿ ಹಾಗೂ ಟಿಎಸ್ ಪಿಯಲ್ಲಿಯೂ ದಲಿತರ ಹಣವನ್ನು ಲೂಟಿ ಮಾಡಿದ್ದಾರೆ. ಎಸ್ಸಿಪಿ ಟಿಎಸ್ ಪಿಯ ಸುಮಾರು 25 ಸಾವಿರ ಕೋಟಿ ರೂ. ದಲಿತರ ಹಣವನ್ನು ಸಾಮಾನ್ಯ ವರ್ಗದ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದು ದಲಿತ ವಿರೋಧಿ ಸರ್ಕಾರವಾಗಿದೆ. ಮುಡಾ ಹಗರಣದಲ್ಲಿ ಸರ್ಕಾರ ಸಿಲುಕಿಕೊಂಡಿರುವುದರಿಂದ ಮುಂದಿನ ಮೂರು ವರ್ಷ ಕೇವಲ ತಮ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ ಹೊರತು ರಾಜ್ಯದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.


ರಾಜ್ಯ ಸರ್ಕಾರ ತಕ್ಷಣವೇ ಎರಡೂ ಹಗರಣಗಳನ್ನು ಸಿಬಿಐಗೆ ನೀಡಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಇಂದು ಸಂಸತ್ ಭವನದ ಹೊರಗೆ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ವಾರ ಸಂಸತ್ ಒಳಗೂ ಈ ಹಗರಣಗಳ ಕುರಿತು ವಿಸ್ತೃತವಾದ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಸದರಾದ ಗೋವಿಂದ ಕಾರಜೋಳ, ವಿಶ್ವೆಶ್ವರ ಹೆಗಡೆ ಕಾಗೇರಿ, ಡಾ‌. ಮಂಜುನಾಥ, ಪಿ.ಸಿ ಗದ್ದಿಗೌಡರ, ಯದುವೀರ ಒಡೆಯರ್, ಬಿ.ವೈ ರಾಘವೇಂದ್ರ, ಜಗ್ಗೇಶ್, ನಾರಾಯಣಸಾ ಭಾಂಡಗೆ ಸೇರಿದಂತೆ ರಾಜ್ಯದ ಬಿಜೆಪಿ ಸಂಸದರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial